Monday, August 22, 2011

ಅಕ್ರಮ ಗಣಿ ವರದಿಯ ಪಟ್ಟಿಯಲ್ಲಿ ಈ ಟಿವಿ ಸುದ್ದಿ ಮುಖ್ಯಸ್ಥ

ದೇಶಾದ್ಯಂತ ಕೋಲಹಲ ಎಬ್ಬಿಸಿರುವ ಕರ್ನಾಟಕದ ಗಣಿ ಮಾಫಿಯದಲ್ಲಿ ಇದೀಗ ಮಾದ್ಯಮದ ಮಂದಿಗಳು ಬೆತ್ತಲಾಗುತ್ತಿದ್ದಾರೆ.ಹಿಂದಿನ ಲೋಕಯುಕ್ತರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಯಾರೆಲ್ಲ ಮಾದ್ಯಮದ ಮಂದಿಗಳು ಗಣಿ ಲಂಚ ಪಡೆದಿದ್ದಾರೆ ಮತ್ತು ಗಣಿ ಅಕ್ರಮಕ್ಕೆ ರಾಜಕರಣಿಗಳ ಮೇಲೆ ಒತ್ತಡ ಹಾಕಿದ್ದಾರೆ ಎಂಬ ವಿಸ್ತೃತ ವರದಿ ಸಲ್ಲಿಸಿದ್ದಾರೆ. ಇದರಲ್ಲಿ ಇತ್ತಿಚೆಗೆ ಕೆಲವರ ಹೆಸರುಗಳನ್ನು ರಾಜ್ಯದ ಪ್ರಭಾವಿ ಪತ್ರಿಕೆಯಾದ ಪ್ರಜಾವಾಣಿಯಲ್ಲಿ ಪ್ರಕಟಿಸಲಾಗಿದೆ.ಇನ್ನು ಹಲವರ ಹೆಸರುಗಳನ್ನು ಇಲ್ಲಿ ಪ್ರಸ್ತಾಪಿಸಿಲ್ಲ. ಇವುಗಳಲ್ಲಿ ಸುವರ್ಣ ಚಾನೆಲ್ಲಿನ ಮಾಜಿ ಕ್ಯಾಪ್ಟನ್ ರಂಗ,ಈ ಟಿವಿ ಸುದ್ದಿ ವಿಭಾಗದ ಮುಖ್ಯಸ್ಥ ಜಗದೀಶ ಮಣಿಯಾನಿ ಕೂಡ ಹೆಸರು ಸೇರ್ಪಡೆಯಾಗಿದ್ದು ಹೆಚ್ಚಿನವರಿಗೆ ಗೊತ್ತಿಲ್ಲ.ಗಣಿ ಧೂಳನ್ನು ತಿಂದವರಲ್ಲಿ ಮಣಿಯಾನಿ ಕೂಡ ಒಬ್ಬ, ಮಣಿಯಾಣಿಯ ಗಣಿಗಾರಿಕೆಯ ಧಂದೆಯನ್ನು ಅವರದೇ ಭಾವ (ಹೆಂಡತಿ ತಮ್ಮ) ನೋಡಿಕೊಳ್ಳುತ್ತಿದ್ದ,ಕೋಟ್ಯಾಂತರ ರೂಪಾಯಿಗಳನ್ನು ಅವನು ತನ್ನ ಭಾವನ ಹೆಸರಿನಲ್ಲಿ ಧಂದೆ ಮಾಡಿ ಜೇಬಿಗೆ ಇಳಿಸಿದ್ದಾನೆ ಎಂದು ತಿಳಿದುಬಂದಿದೆ.ಕಾರವಾರದ ಬೆಲೆಕೇರಿಯ ಬಂದರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಇವರ ಅದಿರನ್ನು ಕಳೆದ ಬಾರಿ ಲೋಕಯುಕ್ತರು ವಶಪಡಿಸಿಕೊಂಡಾಗ ಕಂಗಾಲದ ಮಣಿಯಾಣಿ ರಾಜಕೀಯ ನೇತಾರರಿಂದ ಲೋಕಯುಕ್ತ ಪೋಲಿಸರ ಮೇಲೆ ಒತ್ತಡ ಹಾಕಿ ಅದಿರನ್ನು ಬಿಡಿಸಿಕೊಳ್ಳಲು ಹೆಣಗಾಡಿದ್ದಾನು ಎಂದು ತಿಳಿದು ಬಂದಿದೆ.ಇಂತಹ ಭಷ್ಟರು ಈಟಿವಿಯ ಸುದ್ದಿ ವಿಭಾಗದ ಮುಖ್ಯಸ್ಥರಾದರೆ ಜನತೆ ಇವರಿಂದ ಏನು ನಿರೀಕ್ಷಿಸ ಬಹುದು..? ಈ ಟಿವಿಯ ಉನ್ನತ ಹುದ್ದೆಯಲ್ಲಿರುವರು ಇದನ್ನು ಗಮನಿಸಿ ತನಿಖೆ ನಡೆಸಿದರೆ ಇಂತವರ ಜಾತಕ ಹೊರ ಬರಹುದು..

Tuesday, August 16, 2011

ಅಣ್ಣಾ ಬೆಂಬಲಕ್ಕೆ ಬಂದವರು ಮೈಕಿಗಾಗಿ ಕಿತ್ತಾಡಿದರು

ದೆಹಲಿಯಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕಲು ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಸಮರ ಸಾರಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಅಣ್ಣಾ ಹಜಾರೆಯನ್ನು ಬಂಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಮಂಗಳೂರಲ್ಲಿ ಅಣ್ಣಾ ಅವರಿಗೆ ಬೆಂಬಲ ಸೂಚಿಸಲು ಮುಂದಾದ ಎರಡು ಬಣಗಳು ಮೈಕಿಗಾಗಿ ಕಿತ್ತಾಡಿದ ಮಾಡಿದ ವಿಲಕ್ಷಣ ಘಟನೆ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆದಿದೆ.ಭ್ರಷ್ಟಾಚಾರ ವಿರೋಧಿ ವೇದಿಕೆ ಮತ್ತು ಲೋಕಪಾಲ ಮಸೂದೆ ಪರ ಗುಂಪುಗಳು ಅಣ್ಣಾ ಹಜಾರೆ ಅವರಿಗೆ ಪ್ರತೇಕವಾಗಿ ಬೆಂಬಲ ನೀಡಲು ಮುಂದಾದವು.ಸೋಜಿಗದ ವಿಷಯ ಸಾರ್ವಜನಿಕ ಭಾಷಣ ಮಾಡಲು ಎರಡೂ ಬಣಗಳಲ್ಲೂ ತವಕ. ಆದರೆ ಹಿರಿಯ ಗಾಂಧಿವಾದಿ ನಾಮದೇವ್ ಶೆಣೈ ಅವರಿಗೆ ಮಾತನಾಡಲು ಅವಕಾಶ ಕೊಟ್ಟರೆ ಸಾಕು ಎನ್ನುವುದು ಒಂದು ಗುಂಪಿನ ವಾದ. ಆದರೆ ಮತ್ತೊಂದು ಗುಂಪು ಲೋಕಪಾಲ ಮಸೂದೆ ಬಗ್ಗೆ ಬೇರೆಯೇ ಸಂಗತಿಗಳಿವೆ, ಅವುಗಳನ್ನು ಬಹಿರಂಗಪಡಿಸಲು ಅವಕಾಶ ಕೊಡಬೇಕು ಎನ್ನುವ ಪಟ್ಟು.ಅಂತಿಮವಾಗಿ ಹಿರಿಯ ಗಾಂಧಿವಾದಿ ನಾಮದೇವ್ ಶೆಣೈ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಲಾಯಿತು. ಎರಡೂ ಬಣಗಳ ಮೈಕಿಗಾಗಿ ಗುದ್ದಾಡಲು ಮುಂದಾದುದದನ್ನು ಪೊಲೀಸರು ಮಧ್ಯೆ ಪ್ರವೇಶಿಸಿ ತಿಳಿಗೊಳಿಸಿದರು. ಅಂತೂ ಅಣ್ಣಾ ಅವರಿಗೆ ಎರಡೂ ಗುಂಪುಗಳ ಬೆಂಬಲ ಸಿಕ್ಕಿತು.
ಬಲ್ಲ ಮೂಲಗಳ ಮಾಹಿತಿ ಆಧಾರದಲ್ಲಿ ಹೇಳುವುದಾದರೆ ಇಲ್ಲಿ ಸೇರಿದವರಲ್ಲಿ ಶೇಕಡ 50ರಷ್ಟು ಭ್ರಷ್ಟರು ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದರು,ಕೆಲವರು ಭೂಗಾತ ಪಾತಕಿಗಳು ಮತ್ತು ವಿವಿಧ ಪೋಲಿಸ್ ಠಾಣೆಗಳಲ್ಲಿ ಪ್ರಕರಣಗಳಿರುವವರು ಇದ್ದರು.ಇವರು ಭ್ರಷ್ಟಾಚಾರದ ಬಗ್ಗೆಮಾತನಾಡುವುದು ಬಿಡಿ ಬೆಂಬಲ ನೀಡಲು ನಾಲಯಕ್ಕು..ನೇರ ನಡೆ ನುಡಿಯ ಹಿರಿಯ ಗಾಂಧಿವಾದಿ ನಾಮದೇವ್ ಶೆಣೈ ಮಾತ್ರ ಪ್ರತಿಭಟನೆಯಲ್ಲಿ ತಲೆಗೆ ಗಾಂಧಿ ಟೋಪಿ ಇಟ್ಟ( ಇತರರಿಗೆ ಟೋಪಿ ಇಡುವ) ಮಂದಿಯನ್ನು ಚೆನ್ನಾಗಿ ತರಾಟೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.ಗಾಂಧಿ ಟೋಪಿ ಇಟ್ಟು ಗಾಂಧಿ ಪ್ರತಿಮೆ ಬಳಿ ಮಾಧ್ಯಮಗಳಿಗೆ ಫೋಸು ಕೊಟ್ಟರೆ ಭ್ರಷ್ಟಾಚಾರ ಕಡಿಮೆ ಆಗಲ್ಲ ಮತ್ತು ಈ ಭ್ರಷ್ಟರಿಗೆ ಇಂತಹ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವ ನೈತಿಕತೆ ಕೂಡ ಇಲ್ಲ ಎಂದು ಚೆನ್ನಾಗಿ ತದಕಿದ್ದಾರಂತೆ.ಇಷ್ಟು ಸಾಕಾ ಅಲ್ಲಾ ಇನ್ನೂ ಬೇಕಾ ಈ ಭ್ರಷ್ಟರಿಗೆ...

ಸಮಯ 24x7 : ಜಿ.ಎನ್. ಮೋಹನ್

ಹಿರಿಯ ಪತ್ರಕರ್ತರಾದ ಜಿ.ಎನ್. ಮೋಹನ್ ಸಮಯ ಚಾನೆಲಿನ ಸಂಪಾದಕರಾಗಿ ಅಧಿಕಾರ ವಹಿಸಿದ್ದಾರೆ.ನ್ಯೂಸ್ ಚಾನಲ್ ಹೆಡ್ ಆಗಿ ಕೆಲಸ ಮಾಡುವುದು ಮೀಡಿಯಾ ಮಿರ್ಚಿ ಬರೆದಷ್ಟು ಸುಲಭವಲ್ಲ. ಅದು ಮೋಹನ್‌ರಿಗೆ ಚೆನ್ನಾಗಿಯೇ ಗೊತ್ತಿದೆ.ಜಿ.ಎನ್.ಮೋಹನ್ ಹಿಂದೆ ಪ್ರಜಾವಾಣಿಯಲ್ಲಿದ್ದವರು. ನಂತರ ಈಟಿವಿಗೆ ಬಂದು ಅದರ ನ್ಯೂಸ್ ಮುಖ್ಯಸ್ಥರಾಗಿ ಕೆಲಸ ಮಾಡಿದವರು ಮಾತ್ರವಲ್ಲ ಚಾನೆಲ್ ಗೆ ಒಂದು ಒಳ್ಳೆ ಹೆಸರು ತಂದು ಕೊಟ್ರು. ಬೆಂಗಳೂರು, ಮಂಗಳೂರು, ಗುಲ್ಬರ್ಗ, ಹೈದರಾಬಾದ್ ಮತ್ತು ಇತರೆಡೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ.
ಈ ಟಿವಿ ಬಿಟ್ಟ ನಂತರ ಅವರು ತಮ್ಮದೇ ಆದ ಮೇ ಫ್ಲವರ್ ಮೀಡಿಯಾ ಹೌಸ್ ಕಟ್ಟಿಕೊಂಡರು.ಪರ್ಯಾಯ ಮಾಧ್ಯಮದ ಕುರಿತು ಜಿ.ಎನ್.ಮೋಹನ್ ಹುಡುಕಾಟ ನಡೆಸುತ್ತಿದ್ದರು. ತನ್ನ ಕನಸಿನ ಕೂಸು ಮೇ ಫ್ಲವರ್ ಒಂದು ಸಂಸ್ಥೆಯನ್ನಾಗಿ ಬೆಳೆಸಲು ಯತ್ನಿಸಿದರು. ಅದು ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಆದರೆ ಪ್ರಯತ್ನಗಳಂತೂ ನಿಲ್ಲಲಿಲ್ಲ. ಮಾಧ್ಯಮ ಕೋರ್ಸುಗಳನ್ನು ಆರಂಭಿಸುವ ಪ್ರಯತ್ನ ನಡೆಸಿದರು. ಅವಧಿ ಎಂಬ ಸೊಗಸಾದ ಬ್ಲಾಗ್ ರೂಪಿಸಿದರು. ನಂತರ ಅದನ್ನು ವೆಬ್ ಸೈಟ್ ಮಾಡಿದರು. ಕನ್ನಡ ಪತ್ರಕರ್ತರ ಪೈಕಿ ಅತ್ಯಂತ ಹೆಚ್ಚು ಸಾಂಸ್ಕೃತಿಕ ವ್ಯಕ್ತಿತ್ವ ಹೊಂದಿದವರು ಮೋಹನ್. ಹೀಗಾಗಿಯೇ ವ್ಯಾವಹಾರಿಕ ಪ್ರಯತ್ನಗಳನ್ನು ಮಾಡಿದಾಗಲೆಲ್ಲ ಟೀಕೆಗೆ ಗುರಿಯಾದರು. ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದ ಜನರ ಜತೆಗೆ ಅವಿನಾಭಾವ ಸಂಬಂಧವಿಟ್ಟುಕೊಂಡಿರುವ ಮೋಹನ್ ಮೀಡಿಯಾ ಗ್ರಾಮರ್ ಚೆನ್ನಾಗಿ ಅರಿತವರು. ಈ ಟಿವಿಯಲ್ಲಿ ನಡೆಸಿದ ಪ್ರಯೋಗಗಳು ಇದಕ್ಕೆ ಸಾಕ್ಷಿ.
ನ್ಯೂಸ್ ಚಾನಲ್‌ಗಳು ಒಂದರ ಹಿಂದೊಂದರಂತೆ ಬರುವುದಕ್ಕೂ ಮುನ್ನ ಇದ್ದ ಮನರಂಜನಾ ಚಾನಲ್‌ಗಳಲ್ಲಿ ಅತಿಹೆಚ್ಚು ಪಾಪ್ಯುಲರ್ ಆಗಿದ್ದು ಈ ಟಿವಿ ನ್ಯೂಸ್. ಸುದ್ದಿಗೂ ಮನರಂಜನೆಯ ಟಚ್ ನೀಡಿದ ಮೊದಲಿಗರು ಮೋಹನ್. (ಅದೆಷ್ಟು ಸರಿ ಎಂಬ ಚರ್ಚೆ ಈಗಲೂ ಇದೆ.) ಪೂರ್ಣಚಂದ್ರ ತೇಜಸ್ವಿ ಸಾವಿನ ನಂತರ ಈಟಿವಿ ಸುದ್ದಿಯಲ್ಲಿ ಪ್ರಸಾರವಾದ ತೇಜಸ್ವಿ ನೆನಪು ಮಾಲಿಕೆ ಸದಾ ಕಾಲಕ್ಕೂ ಸ್ಮರಣೀಯ. ರಾಜಕೀಯ ವಿದ್ಯಮಾನಗಳಿಗೆ ಸಿನಿಮಾ ಹಾಡುಗಳ ಹಿನ್ನೆಲೆ ನೀಡಿ ಯಶಸ್ವಿಯಾಗಿದ್ದೂ ಜಿ.ಎನ್.ಮೋಹನ್ ಪ್ರಯೋಗವೇ.
ಆದರೆ ಈಗ ಕಾಲ ತುಂಬಾ ಮುಂದಕ್ಕೆ ಹೋಗಿದೆ. ಸುದ್ದಿ ಚಾನಲ್‌ಗಳ ಪೈಪೋಟಿ ವಿಪರೀತಕ್ಕೆ ಏರಿದೆ. ಜ್ಯೋತಿಷ್ಯ, ಕ್ರೈಂ, ಪುನರ್ಜನ್ಮ, ಸೆಕ್ಸ್ ಇತ್ಯಾದಿ ಮಸಾಲೆಗಳಿಲ್ಲದೆ ಸುದ್ದಿ ಚಾನಲ್ ನಡೆಸಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಏನನ್ನು ನೋಡುತ್ತಾರೆ ಎಂಬುದಷ್ಟೇ ಚಾನಲ್‌ಗಳಿಗೆ ಮುಖ್ಯ, ಏನನ್ನು ಕೊಡಬೇಕು ಎಂಬುದಲ್ಲ. ಹೀಗಿರುವಾಗ ಮೋಹನ್‌ರ ಸಾಂಸ್ಕೃತಿಕ ಅಭಿರುಚಿಗಳು ಅವರನ್ನು ಕಾಪಾಡುತ್ತವಾ ಎಂಬುದು ಮಹತ್ವದ ಪ್ರಶ್ನೆ. ಆದರೆ ಮೋಹನ್ ಇನ್ನೂ ಹುಡುಗು ಮನಸ್ಸಿನವರು, ಹೀಗಾಗಿ ಹೊಸಹೊಸ ಪ್ರಯೋಗಗಳನ್ನು ಮಾಡಬಲ್ಲರು ಎಂಬ ನಂಬಿಕೆಯೂ ಇದೆ.ಟಿವಿ9 ಎಲ್ಲ ನ್ಯೂಸ್ ಚಾನಲ್‌ಗಳಿಗಿಂತ ಮುಂದಿದೆ. ಅದನ್ನು ಹಿಮ್ಮೆಟ್ಟುವ ಧೀರರು ಸದ್ಯಕ್ಕೆ ಕಾಣುತ್ತಿಲ್ಲ. ಕಸ ಕೊಟ್ಟರೂ ರಸ ಮಾಡಿಕೊಳ್ಳುವ ಕಲೆ ಆ ಚಾನೆಲ್‌ನ ಸಿಬ್ಬಂದಿಗಿದೆ. ಯಾರು ಬಿಟ್ಟು ಹೋದರೂ ಕ್ಯಾರೇ ಅನ್ನದೇ, ಹೊಸ ಹುಡುಗ-ಹುಡುಗಿಯರನ್ನು ಸಿದ್ಧಪಡಿಸುವ ಛಾತಿ ಅವರಿಗಿದೆ. ಇನ್ನು ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ಸುವರ್ಣ ನ್ಯೂಸ್ ನಿರ್ದಿಷ್ಟ ಪೊಲಿಟಿಕಲ್ ಅಜೆಂಡಾಗಳೊಂದಿಗೆ ಮುನ್ನುಗ್ಗುತ್ತಿದೆ. ಸುವರ್ಣ ನ್ಯೂಸ್‌ಗೆ ಫೈಟಿಂಗ್ ಮಾಡುತ್ತಿರುವುದು ಜನಶ್ರೀ. ಈ ಚಾನಲ್‌ನ ವಿಶೇಷವೆಂದರೆ ಕಸ್ತೂರಿ ಟಿವಿಯ ಹಾಗೆ ಇದು ಮಾಲೀಕರ ತುತ್ತೂರಿಯಾಗಲಿಲ್ಲ. ಅದರ ಪರಿಣಾಮಗಳು ಈಗ ಕಾಣಿಸುತ್ತಿವೆ.ಇಂಥ ಸನ್ನಿವೇಶದಲ್ಲಿ ಜಿ.ಎನ್.ಮೋಹನ್ ಸಮಯದಲ್ಲಿ ಏನೇನು ಮಾಡಬಹುದು? ಪಾತಾಳಕ್ಕೆ ಇಳಿದಿರುವ ಟಿಆರ್‌ಪಿ ಎತ್ತಲು ಅವರಿಂದ ಸಾಧ್ಯವೇ? 24x7ನ್ಯೂಸ್ ಚಾನಲ್‌ನ ಗ್ರಾಮರುಗಳಿಗೆ ಅವರು ಒಗ್ಗಿಕೊಳ್ಳಬಹುದೇ? ಕಾದು ನೊಡೋಣ ಅಲ್ಲವೇ..?

Friday, August 12, 2011

ಬ್ರೇಕಿಂಗ್ ನ್ಯೂಸ್

ಟಿವಿ ೬೯, ಕರ್ಣ ಕಠೋರ ಟಿವಿ, ಊದುವ ಟಿವಿ, ಗಂಟೆ ಟಿವಿ, ಆ ಟಿವಿ-ಗಳು ಸದ್ಯಕ್ಕೆ ಕರ್ನಾಟಕದಲ್ಲಿ ಚಾಲ್ತಿಯಲ್ಲಿವೆ. ಇನ್ನೂ ಹಲವಾರು ನ್ಯೂಸ್ ಚಾನಲ್ಲುಗಳು ಮನೋರಂಜನೆಯ ಮಹಾಪೂರದಿಂದ ಕನ್ನಡಿಗರ ಮನತಣಿಸಲು ಸಧ್ಯದಲ್ಲೇ ಪ್ರಾರಂಭಗೊಳ್ಳುವ ಸೂಚನೆಗಳು ದಟ್ಟವಾಗಿದೆ. ಈ ಟಿ ವಿ ಚಾನಲ್ಲುಗಳು ಭಾರೀ ಪೈಪೋಟಿಯಿಂದ ಬ್ರೇಕಿಂಗ್ ನ್ಯೂಸ್, ಎಕ್ಸ್ ಕ್ಲೂಸಿವ್ ಗಳನ್ನು ನೀಡತೊಡಗಿವೆ. ಅವುಗಳಲ್ಲಿ ಬಿತ್ತರವಾಗುವ ಗಂಭೀರ ಸುದ್ದಿಗಳು, ರಾಜಕೀಯ ಚಕಮಕಿ, ಬ್ರೇಕಿಂಗ್ ಸುದ್ದಿಗಳು, ಪ್ರಾಯೋಜಿತ ಪಾನಲ್ ಡಿಸ್ಕಷನ್ ಗಳು ಹೇಗಿರುತ್ತವೆಂಬುದರ ಬಗೆಗಿನ ವಿಡಂಬನಾತ್ಮಕ ಬರಹವಿದು.
ಟಿವಿ ೬೯ ಸಧ್ಯಕ್ಕೆ ಹೆಚ್ಚು ಚಾಲ್ತಿಯಲ್ಲಿರುವ ನ್ಯೂಸ್ ಚಾನಲ್ ಎಂದು ತನ್ನನ್ನು ಕರೆದುಕೊಳ್ಳುತ್ತಿದೆ. ಇದರಲ್ಲಿ ಬೆಳಿಗ್ಗೆ ವಿಲನ್ ನಂತೆ ಕಾಣಿಸಿಕೊಳ್ಳುವ ವ್ಯಕ್ಯಿ ಸಂಜೆ ಹೊತ್ತಿಗೆ ನಾಯಕನಂತೆ ಕಂಗೊಳಿಸುತ್ತಾನೆ. ಈ ಟಿವಿ ೬೯ ಯಾವಾಗ ಆರು ಅಗಿರುತ್ತದೆ ಯಾವಾಗ ಒಂಭತ್ತು ಆಗಿರುತ್ತದೆ ಹೇಳಲಾಗುವುದಿಲ್ಲ! ಸಣ್ಣದಿರಲಿ, ದೊಡ್ಡದಿರಲಿ ಬೇಗನೇ ಜನರಿಗೆ ಮುಟ್ಟಿಸಬೇಕೆಂಬ ಆತುರದಲ್ಲಿಯೇ ಈ ಟಿವಿ ಬ್ರೇಕಿಂಗ್ ನ್ಯೂಸ್ ಗಳನ್ನು ನೀಡುವ ಪರಿ ಹೇಗಿರುತ್ತದೆಂದರೆ...
ಸುದ್ದಿ ನಿರೂಪಕಿ :(ವಾರ್ತೆಯನ್ನು ಓದುತ್ತಾ) "ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಮನೆ ಮಠವನ್ನೆಲ್ಲಾ ಕಳೆದುಕೊಂಡು ಬೀದಿ ಪಾಲಾಗಿರುವ ರೈತರ ಬವಣೆಯನ್ನು ಈ ವಿಶೇಷ ಕಾರ್ಯಕ್ರಮದ ಮೂಲಕ ನಾವೀಗ ನಿಮ್ಮ ಮುಂದಿಡುತ್ತಿದ್ದೇವೆ, ನಮ್ಮ ವರದಿಗಾರ ಪ್ರವಾಹ ಪೀಡಿತ ರೈತರೊಂದಿಗೆ ನಡೆಸುವ ನೇರ ಸಂದರ್ಶನ ಇದೋ ನಿಮಗಾಗಿ ಟಿ ವಿ ಸಿಕ್ಸ್ಟಿ ನೈನ್ ನಲ್ಲಿ ಮಾತ್ರ"...

ರೈತನೊಬ್ಬ ದುಃಖತಪ್ತನಾಗಿ ಪ್ರವಾಹ ಪೀಡಿತನಾದ ತನ್ನ ನೆರವಿಗೆ ಸರ್ಕಾರ ಬಾರದಿದ್ದರಿಂದ ತನ್ನಿಬ್ಬರು ಎಳೇ ವಯಸ್ಸಿನ ಮಕ್ಕಳು ಚಳಿ ಮಳೆಯನ್ನು ತಾಳಲಾರದೇ ಸತ್ತ ಹೃದಯ ವಿದ್ರಾವಕ ಘಟನೆಯ ಬಗ್ಗೆ ಮಾತನಾಡಲು ಆರಂಭಿಸತೊಡಗುತ್ತಾನೆ. ಆ ಹೊತ್ತಿನಲ್ಲೇ ಟಿವಿ ಪರದೆಯ ಮೇಲೆ ಬ್ರೇಕಿಂಗ್ ನ್ಯೂಸ್ ಒಂದು ಕಾಣಿಸಿಕೊಳ್ಳುತ್ತದೆ. ರೈತನ ಮುಖ ಮರೆಯಾಗಿ -ಹುಚ್ಚು ನಾಯಿಯನ್ನು ಅಟ್ಟಾಡಿಸಿಕೊಂಡು ಕೊಂದ ಜನರು- ಎಂಬ ಸುದ್ದಿ ಪ್ರತ್ಯಕ್ಷವಾಗುತ್ತದೆ. ಕೂಡಲೇ ವಾರ್ತಾ ನಿರೂಪಕಿ ಮಧ್ಯೆ ಪ್ರವೇಶಿಸಿ "ಈಗ ಬಂದ ಸುದ್ದಿಯೆಂದರೆ ಬೆಂಗಳೂರಿನಲ್ಲಿ ಜನರನ್ನು ಕಚ್ಚಲು ಹೋಗುತ್ತಿದ್ದ ಹುಚ್ಚು ನಾಯಿಯೊಂದನ್ನು ಜನರೇ ಅಟ್ಟಾಡಿಸಿಕೊಂಡು ಕೊಂದ ಘಟನೆ ನಡೆದಿದೆ. ಅದು ನಿಜವಾಗಲೂ ಹುಚ್ಚು ನಾಯಿಯಾಗಿತ್ತೋ, ಅಥವಾ ತಲೆಕೆಟ್ಟ ಜನರು ಅದನ್ನು ಕೊಂದು ಹಾಕಿದರೋ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾವೀಗ ನಾಯಿಯನ್ನು ಕೊಂದು ಹಾಕಿರುವ ಸ್ಥಳದಲ್ಲಿಯೇ ಇರುವ ನಮ್ಮ ಪ್ರತಿನಿಧಿಯನ್ನು ನೇರವಾಗಿ ಸಂಪರ್ಕಿಸಲಿದ್ದೇವೆ"...ಎಂದು ಶುರು ಮಾಡುತ್ತಾಳೆ.

ಪ್ರವಾಹದಿಂದಾಗಿ ಸಾವಿರಾರು ರೈತರು ಅನುಭವಿಸುತ್ತಿರುವ ಕಷ್ಟವನ್ನು ಹೇಳಿಕೊಳ್ಳಲು ಸಿದ್ದನಾಗಿದ್ದ ರೈತನ ಸಂದರ್ಶನ ಹುಚ್ಚು ನಾಯಿ ಸತ್ತ ಬ್ರೇಕಿಂಗ್ ಸುದ್ದಿಯಿಂದಾಗಿ ಅಲ್ಲಿಗೇ ಕಟ್ ಆಗುತ್ತದೆ.
ಹುಚ್ಚು ನಾಯಿ ಸತ್ತ ಸ್ಥಳದಲ್ಲಿದ್ದ ವರದಿಗಾರ ಸತ್ತ ನಾಯಿಯ ಶವವನ್ನು ತೋರಿಸುತ್ತಾ ಅದರ ಬಗ್ಗೆ ವಿವರಣೆ ನೀಡಲಾರಂಭಿಸುತ್ತಾನೆ.
ವರದಿಗಾರ: "ನೋಡಿ ಮೇಡಂ, ಈಗ ತಾನೇ ಈ ನಾಯಿ ಸತ್ತು ಬಿದ್ದಿದೆ. ನಾಯಿಯನ್ನು ಜನರು ಅಟ್ಟಾಡಿಸಿಕೊಂಡು ಹೊಡೆಯುವ ಸುದ್ದಿ ನಮ್ಮ ಕಿವಿಗೆ ಬಿದ್ದ ತಕ್ಷಣ ನಾವು ಸ್ಥಳಕ್ಕೆ ಧಾವಿಸಿದೆವು. ಅಷ್ಟರಲ್ಲಿ ಜನ ಈ ನಾಯಿಯನ್ನು ಕೊಂದು ಹಾಕಿದ್ದರಿಂದ ನಮಗೆ ಅದರ ನೇರ ದೃಶ್ಯವನ್ನು ನಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಲಿಲ್ಲ, ಅದಕ್ಕಾಗಿ ನಾವು ನಮ್ಮ ವೀಕ್ಷಕರ ಕ್ಷಮೆ ಯಾಚಿಸುತ್ತೇವೆ, ನಮಗೆ ಮಾಹಿತಿ ನೀಡಿದ ವ್ಯಕ್ತಿ ನಮಗೆ ಸರಿಯಾಗಿ ವಿಳಾಸ ತಿಳಿಸುವಲ್ಲಿ ವಿಫಲನಾದುದರಿಂದ ನಾವು ಸರಿಯಾದ ಸಮಯಕ್ಕೆ ಈ ಜಾಗವನ್ನು ತಲುಪಲಾಗಲಿಲ್ಲ... ಇಲ್ಲಿ ನಮಗಿರುವ ಅನುಮಾನವೆಂದರೆ ಈ ನಾಯಿಗೆ ನಿಜವಾಯೂ ಹುಚ್ಚು ಹಿಡಿದಿತ್ತೇ ಎಂಬುದು, ನಾವು ಅದರ ಬಗ್ಗೆ ಇಲ್ಲಿಯ ಜನರನ್ನು ವಿಚಾರಿಸಿದಾಗ ಅವರು ಭಿನ್ನವಾದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ...."

ಆತನ ಮಾತನ್ನು ಅರ್ಧದಲ್ಲಿಯೇ ತುಂಡರಿಸಿದ ನಿರೂಪಕಿ: "ಅಲ್ಲ ಇವರೇ, ನಾಯಿಗೆ ನಿಜವಾದ ಹುಚ್ಚು ಹಿಡಿದಿತ್ತೋ ಅಥವಾ ಆ ನಾಯಿಯ ಬಗ್ಗೆ ಯಾರಿಗಾದರೂ ದ್ವೇಷವಿತ್ತೋ ಅಂತ ನನ್ನ ಪ್ರಶ್ನೆ. ಯಾಕೆಂದರೆ ಅಲ್ಲಿನ ಜನರು ಭಿನ್ನವಾದ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ ಎಂದು ಹೇಳುತ್ತಿದ್ದೀರಿ...ಯಾತಕ್ಕಾಗಿ ಈ ಭಿನ್ನ ಅಭಿಪ್ರಾಯ ಎಂಬುದೇನಾದರೂ ನಿಮ್ಮ ಗಮನಕ್ಕೆ ಬಂದಿದೆಯಾ? ಆ ನಾಯಿ ಯಾವ ಜಾತಿಯದ್ದು? ಯಾವ ಬಣ್ಣದ್ದು? ಅದು ಸಾಕಿದ ನಾಯೋ ಅಥವಾ ಬೀದಿ ನಾಯಿಯೋ? ಅದರ ಬಗ್ಗೆ ಸಂಫೂರ್ಣ ಮಾಹಿತಿ ನೀಡ್ತೀರಾ?" ಎಂದು ಕೇಳಿದೊಡನೇ...

ಆ ವರದಿಗಾರ: "ಮೇಡಂ, ನಾವು ಈ ನಾಯಿಯ ಬಗೆಗಿನ ಪೂರ್ವಾಪರಗಳನ್ನು ತಿಳಿದುಕೊಳ್ಳಲು ಇಲ್ಲಿನ ಜನರನ್ನು ಕೇಳಿದಾಗ ಅವರು ’ಹೋಗ್ರೀ ಹುಚ್ಚು ನಾಯಿ ಬಗ್ಗೆ ಕೇಳ್ತೀರಲ್ರೀ’ ಎಂಬ ಉಡಾಫ಼ೆಯಿಂದ ಮಾತನಾಡುತ್ತಿದ್ದಾರೆ, ಇದರ ಬಗ್ಗೆ ತಲೆಕೆಡಿಸಿಕೊಂಡ ನಾವು ಮಾನವ ಹಕ್ಕು ಆಯೋಗದ ಗಮನಕ್ಕೆ ತಂದಾಗ ಅಲ್ಲಿದ್ದವರು ’ನೋಡ್ರೀ ಮನುಷ್ಯರ ಮೇಲೆ ದೌರ್ಜನ್ಯ ನಡೆದಲ್ಲಿ ಸ್ಪಂದಿಸುವುದು ನಮ್ಮ ಕೆಲಸ. ನಾಯಿ ನರಿಗಳ ಮೇಲೆ ನಡೆದ ಹಲ್ಲೆಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಪ್ರಾಣಿ ದಯಾ ಸಂಘದವರಿದ್ದಾರಲ್ಲಾ ಅವರಿಗೆ ಹೇಳಿ’ ಅಂದುಬಿಟ್ಟರು ಮೇಡಂ. ಈ ಬಗ್ಗೆ ನಾವು ಪ್ರಾಣಿ ದಯಾ ಸಂಘದವರನ್ನೂ ಸಂಪರ್ಕಿಸಿದೆವು ಮೇಡಂ...’ಬದುಕಿರುವ ಪ್ರಾಣಿಗಳ ಬಗ್ಗೆಯಷ್ಟೇ ನಮ್ಮ ಗಮನ. ಸತ್ತಿದ್ದರೆ ಕಾರ್ಪೋರೇಷನ್ನಿನವರಿಗೆ ಹೇಳಿ. ಅವರು ಎತ್ತಿ ಹಾಕ್ತರೆ ಅಂತ ಅವ್ರೂ ಉಡಾಫ಼ೆಯಿಂದ ಮಾತನಾಡಿ ಬಿಟ್ರು ಮೇಡಂ, ನಮಗೆ ಮುಂದೇನು ಮಾಡಬೇಕೆಂದು ದಿಕ್ಕು ತೋಚದೇ ಸತ್ತ ನಾಯಿಯ ಶವದ ಮುಂದೆ ನಿಂತಿದ್ದೇವೆ ಮೇಡಮ್"...

ಕೂಡಲೇ ಸುದ್ದಿ ನಿರೂಪಕಿ: "ನೊಡೀ ಇವರೇ, ನೀವು ಅಲ್ಲೇ ಇರಿ. ಜಾಗ ಬಿಟ್ಟು ಕದಲಬೇಡಿ, ನಾವೀಗ ಇದರ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡುವ ಸಲುವಾಗಿ ನಮ್ಮ ಸ್ಟುಡಿಯೋದಲ್ಲಿರುವ ಮುಖ್ಯ ವರದಿಗಾರರನ್ನು ಸಂಪರ್ಕಿಸಲಿದ್ದೇವೆ" ಅಂತ ಅಲ್ಲಿ ಕುಳಿತಿದ್ದ ಗಡ್ಡಧಾರಿಯೊಬ್ಬರನ್ನು ಪ್ರಶ್ನೆ ಕೇಳುತ್ತಾಳೆ. "ನೋಡೀ ಇವ್ರೇ, ಒಂದು ನಾಯಿಯನ್ನು ಜನ ಅಟ್ಟಾಡಿಸಿ ಕೊಂದರೂ ಸಾರ್ವಜನಿಕರೂ ಸೇರಿದಂತೆ ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ಮಾನವ ಹಕ್ಕು ಆಯೋಗದವರು ನಾಯಿ ನರಿಗಳು ನಮಗೆ ಸಂಬಂದಿಸಿಲ್ಲ ಅಂತಾರಂತೆ ಇನ್ನು ಪ್ರಾಣಿ ದಯಾ ಸಂಘದವರು ಸತ್ತ ಪ್ರಾಣಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಅಂತಾರಂತೆ, ಇನ್ನು ಕಾರ್ಪೋರೇಷನ್ನಿನವರಂತೂ ಬಿಡ್ರೀ ದಿನಕ್ಕೆ ನೂರಾರೂ ಹುಚ್ಚು ನಾಯಿಗಳು ಸಾಯ್ತವೆ ಅಂತಾರಂತೆ. ಇದರ ಹೊಣೆ ಯಾರು ಹೊರಬೇಕು ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?"

ಅದಕ್ಕೆ ಸ್ಟುಡಿಯೊದಲ್ಲಿರುವ ಆ ವರದಿಗಾರ: "ಮೇಡಂ, ಇದು ಬಗೆಹರಿಯದ ಪ್ರಶ್ನೆಯಾಗಿದೆ, ಆ ನಾಯಿ ಹಲವಾರು ಜನರನ್ನು ಕಚ್ಚಿತ್ತು ಎಂಬ ಮಾಹಿತಿ ನಮಗೀಗ ಲಭ್ಯವಾಗಿದೆ. ಜನರನ್ನು ಕಚ್ಚಿದ ಮಾತ್ರಕ್ಕೆ ಅದನ್ನು ಹಾಗೆ ದಾರುಣವಾಗಿ ಚಚ್ಚಿ ಹಾಕಬೇಕೆಂದು ಕಾನೂನಿಲ್ಲ, ಆ ರೀತಿ ಅದನ್ನು ಕೊಂದು ಹಾಕಿರುವುದು ನನ್ನ ದೃಷ್ಟಿಯಲ್ಲಿ ಆಕ್ಷಮ್ಯ ಅಪರಾಧ ಮೇಡಂ"...

ಅಲ್ಲಿ ದೂರದ ಉತ್ತರ ಕರ್ನಾಟಕದಲ್ಲಿ ತನ್ನ ಕರುಣಾಜನಕ ಕಥೆಯನ್ನು ಟಿ ವಿ ಯವರ ಮುಂದೆ ಹೇಳಿಕೊಳ್ಳಲು ನಿಂತಿದ್ದ ರೈತ "ಇದ್ಯಾಕ್ ಸ್ವಾಮೀ, ಸುಮ್ಮನೆ ನಿಂತ್ರೀ? ಮಾತಾಡ್ಲೋ, ಬೇಡ್ವೋ, ಅಂತ ಅಲ್ಲಿದ್ದ ವರದಿಗಾರನಿಗೆ ಕೇಳಿದ.
ಕೂಡಲೇ ಆ ವರದಿಗಾರ: "ಸುಮ್ನಿರಯ್ಯಾ! ಈಗ ಬ್ರೇಕಿಂಗ್ ನ್ಯೂಸ್ ಹೋಗ್ತಾಯಿದೆ! ನಮ್ಮ ಚಾನೆಲ್ ದೇ ಫಸ್ಟ್ ನ್ಯೂಸು. ಬೆಂಗಳೂರಲ್ಲಿ ಜನ ಹುಚ್ಚು ನಾಯಿಯನ್ನು ಕೊಂದು ಹಾಕಿದ್ದಾರೆ, ಅದರ ಬಗ್ಗೆ ನಮ್ಮ ಚಾನಲ್ ನವರೆಲ್ಲಾ ಬ್ಯುಸಿಯಾಗಿದ್ದಾರೆ, ಮೊದಲು ಅದು ಮುಗೀಲಿ ಆಮೇಲೆ ನಿನ್ನ ಕಥೆ..." ಅನ್ನುತ್ತಾನೆ. ಅದಕ್ಕೆ ಆ ರೈತ "ಅಲ್ಲಾ ಸ್ವಾಮಿ ಹುಚ್ಚು ನಾಯಿ ಸಾಯದೂ ಒಂದು ಸುದ್ದಿಯಾ?? ಹೊಟ್ಟೆಗ್ ಹಿಟ್ಟಿಲ್ದೆ, ಚಳಿ ತಾಳ್ದೆ, ಕಾಯಿಲೆ ಬಿದ್ದು ನನ್ನ ಎರಡೂ ಮಕ್ಳೂ ತೀರ್ಕಂಡವೆ. ನನ್ ಕಥೆ ಕೇಳ್ದೆ ನೀವು ಹುಚ್ಚು ನಾಯಿ ಕಥೆ ಕೇಳ್ಕಂಡಿದ್ದಿರಲ್ಲಾ"... ಎಂದು ಗೋಳಾಡುತ್ತಾ ಎದ್ದು ಹೋದ.

ಛಲ ಬಿಡದ ತ್ರಿವಿಕ್ರಮಿಯಂತೆ ಸುದ್ದಿ ನಿರೂಪಕಿ: "ನಾವೀಗ ನಾಯಿ ಸತ್ತ ಜಾಗದಲ್ಲಿರುವ ನಮ್ಮ ವರದಿಗಾರರನ್ನು ಭೇಟಿಯಾಗೋಣ, ನೋಡೀ ಇವರೇ, ನೀವು ಎಷ್ಟು ಹೊತ್ತಿನಿಂದ ಆ ಜಾಗದಲ್ಲಿಯೇ ಇದ್ದೀರಿ, ಸತ್ತ ನಾಯಿಯ ವಾರಸುದಾರರು ಯಾರಾದರೂ ಅಲ್ಲಿಗೆ ಬಂದರಾ, ಆ ನಾಯಿಯ ಯಾವ ಯಾವ ಜಾಗಕ್ಕೆ ಏಟು ಬಿದ್ದಿದೆ, ಅದರ ಪೋಸ್ಟ್ ಮಾರ್ಟಮ್ ಅನ್ನು ಮಾಡುತ್ತಾರೆಯೋ ಹೇಗೆ?"

ನಾಯಿ ಸತ್ತ ಜಾಗದಲ್ಲಿದ್ದ ವರದಿಗಾರ: "ಮೇಡಂ ಇಲ್ಲಿ ಯಾರೂ ಸ್ಥಳದಲ್ಲಿಲ್ಲ, ನಾನು ಮತ್ತು ನಮ್ಮ ಕ್ಯಾಮರಾ ಮೆನ್ ಇಬ್ಬರೇ ಇರುವುದು, ಈ ನಾಯಿ ನನ್ನದೆಂದು ಹೇಳಿಕೊಳ್ಳಲು ಯಾರೂ ಇಲ್ಲಿಗೆ ಬಂದಿಲ್ಲ, ಈ ಹುಚ್ಚು ನಾಯಿಯು ಹಲವಾರು ಜನರಿಗೆ ಕಚ್ಚಿರುವುದರಿಂದ ಈ ನಾಯಿಯನ್ನು ತನ್ನದೆಂದು ಹೇಳಿಕೊಂಡಲ್ಲಿ ಈ ನಾಯಿಗಾದ ಗತಿಯೇ ಅವರಿಗೂ ಆಗುವ ಸಂಭವವಿರುವುದರಿಂದ ಯಾರೂ ಬಂದಿಲ್ಲ. ಇನ್ನು ಈ ನಾಯಿಯನ್ನು ಪೋಸ್ಟ್ ಮಾರ್ಟಮ್ ಮಾಡುವ ಬಗ್ಗೆ ಕೇಳಿದ್ದೀರಿ, ಅದರ ಬಗ್ಗೆ ನಾವೇನಾದರೂ ಜನರಿಗೆ ಒತ್ತಾಯಿಸಿದಲ್ಲಿ ನಾಯಿಗೆ ಬಿದ್ದಂತೆ ನಮಗೆಲ್ಲಿ ಏಟು ಬೀಳುವುದೋ ಎಂಬ ಆತಂಕದಿಂದ ನಾವದರ ಬಗ್ಗೆ ಯಾರನ್ನೂ ಕೇಳಲಿಲ್ಲ. ಇನ್ನು ಸ್ವಲ್ಪ ಹೊತ್ತು ನಾವಿಲ್ಲಿಯೇ ಇದ್ದು ಈ ನಾಯಿಯ ಬಗ್ಗೆಯೇ ವರದಿ ಮಾಡುತ್ತಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತದೋ ನಮಗೇ ಗೊತ್ತಾಗುತ್ತಿಲ್ಲ ಮೇಡಂ..."

ಕೂಡಲೇ ನಿರೂಪಕಿ: "ನೋಡಿ ಇವರೇ, ಕೂಡಲೇ ನೀವು ಆ ಜಾಗ ಖಾಲಿ ಮಾಡಿ, ನಾಯಿ ಕಥೆ ಹಾಳಾಗಲಿ, ಅಲ್ಲಿ ನಮ್ಮ ಬೆಲೆ ಬಾಳುವ ಕ್ಯಾಮರಾಗಳು, ನೇರ ಪ್ರಸಾರದ ಸಲಕರಣೆಗಳಿರುವುದರಿಂದ ನೀವು ಅವುಗಳಿಗೆ ಯಾವುದೇ ಜಖಂ ಆಗದಂತೆ ಹುಶಾರಾಗಿ ಬಂದು ಬಿಡಿ" ಎಂದು ಹೇಳಿ ವೀಕ್ಷಕರತ್ತ ತಿರುಗಿ "ಪ್ರಿಯ ವೀಕ್ಷಕರೇ... ಸಮಯ ಮುಗಿಯುತ್ತಾ ಬಂದಿದೆ... ನಮ್ಮ ಇಂದಿನ ವಿಶೇಷ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ರೈತರ ಬವಣೆಯನ್ನು ನೇರ ಪ್ರಸಾರದ ಮೂಲಕ ಅಲ್ಲಿನ ರೈತರೇ ನಿಮ್ಮ ಮುಂದಿಟ್ಟಿದ್ದಾರೆ, ಕಾರ್ಯಕ್ರಮ ವೀಕ್ಷಿಸಿದ್ದಕ್ಕೆ ತಮಗೆ ಧನ್ಯವಾದಗಳು, ಕ್ಷಣ ಕ್ಷಣದ ಸುದ್ದಿಗಾಗಿ ನೋಡ್ತಾಯಿರಿ ಟಿ ವಿ ಸಿಕ್ಸ್ಟಿ ನೈನ್"

ಹುಚ್ಚು ನಾಯಿ ಸತ್ತ ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ತಮ್ಮ ಬವಣೆಯನ್ನು ಹೇಳಿಕೊಳ್ಳಲಾಗದೇ ನಿರ್ಗಮಿಸಿದ ಬಡ ರೈತರ ವಿಶೇಷ ಕಾರ್ಯಕ್ರಮ ಈ ರೀತಿಯಾಗಿ ಮುಗಿದಿತ್ತೆಂಬುದನ್ನು ಹೇಳುತ್ತಾ....
ಮುಂದಿನ ಸಂಚಿಕೆಯಲ್ಲಿ ಇತರೆ ನ್ಯೂಸ್ ಚಾನಲ್ಲುಗಳ ಮತ್ತಷ್ಟು ಬಹುಗುಣ ವಿಶೇಷತೆಗಳನ್ನು ನಿಮ್ಮ ಮುಂದಿಡಲಿದ್ದೇವೆ... ಅಲ್ಲಿವರೆಗೂ ಬ್ರೇಕಿಂಗ್ ನ್ಯೂಸ್ ಗಳ ತಾಪತ್ರಯವಿಲ್ಲದೇ ಸಮಾಧಾನವಾಗಿ ಬಾಳಿ ಎಂದು ಹಾರೈಸುತ್ತಾ...

ಕನ್ನಡದ ಪುರಾತನ ಊದುವ ಟೀವಿಯೂ, ವಾಚಾಳ ತಿಮ್ಮರಸನೆಂಬ ’ಉತ್ತರ’ ಕುಮಾರನೂ

ಬಹುತೇಕ ನ್ಯೂಸ್ ಚಾನಲ್ಲುಗಳಲ್ಲಿ ನಡೆಯುವ ಸಂವಾದ ಕಾರ್ಯಕ್ರಮಗಳಲ್ಲಿ ಪಕ್ಷಾಂತರಿ ರಾಜಕಾರಣಿಗಳನ್ನು ಟೀಕಿಸುವುದು ಸಾಮಾನ್ಯವಾಗಿದೆ. ಈ ಸಂವಾದ ನಡೆಸಿಕೊಡುವ ನಿರೂಪಕರು ಪಕ್ಷಾಂತರಿಗಳ ಬಗ್ಗೆ ಪುಂಖಾನುಪುಂಖವಾಗಿ ಟೀಕಿಸುವುದರಲ್ಲಿ ನಿಸ್ಸೀಮರು. ಈ ನಿರೂಪಕರಲ್ಲಿ ಬಹುತೇಕರು ವೃತ್ತಿನಿರತ ಪತ್ರಕರ್ತರಾಗಿರುವುದಿಲ್ಲ. ಸುದ್ದಿ ವಾಚಕರಾಗಿ ಕೆಲಸಕ್ಕೆ ಸೇರಿದವರೆಲ್ಲಾ ಮಹಾನ್ ಪ್ರಕಾಂಡ ಪಂಡಿತರಂತೆ ಪೋಸು ಕೊಡುವುದರಲ್ಲಿ ಪರಿಣಿತರು. ವಿಪರ್ಯಾಸವೆಂದರೆ ಪಕ್ಷಾಂತರಿ ರಾಜಕಾರಣಿಗಳನ್ನು ಟೀಕಿಸುವ ಇವರೇ ಮನಬಂದಂತೆ ಚಾನಲ್ಲುಗಳಿಂದ ಚಾನಲ್ಲುಗಳಿಗೆ ನೆಗೆಯುತ್ತಿರುತ್ತಾರೆ. ಇಂದು ಒಂದು ನ್ಯೂಸ್ ಚಾನಲ್ಲಿನಲ್ಲಿ ಕಾಣಿಸುವ ಮುಖ ನಾಳೆ ಮತ್ತೊಂದು ಚಾನಲ್ಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಹೊಸ ಹೊಸ ಚಾನಲ್ಲುಗಳು ಶುರುವಾದಂತೆಲ್ಲಾ ಈ ತಂಗಳು ಮುಖಗಳೇ ಅಲ್ಲಿ ತರತರಾವರಿ ವೇಷಗಳಲ್ಲಿ ರಾರಾಜಿಸತೊಡಗುತ್ತವೆ. ಒಂದು ಚಾನಲ್ಲಿಗೇ ನಿಷ್ಟೆಯಿಂದಿರದ ಈ ಮಂದಿ ಪಕ್ಷಾಂತರಿ ರಾಜಕಾರಣಿಗಳನ್ನು ಟೀಕಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಎಷ್ಟೋ ಬಾರಿ ಈ ನಿರೂಪಕರು ತಾವಿದ್ದ ಚಾನಲ್ಲನ್ನು ಬಿಟ್ಟು ಹೊಸ ಚಾನಲ್ಲಿಗೆ ಸೇರಿಕೊಂಡ ನಂತರವೂ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ತಮ್ಮ ಹಳೆಯ ಚಾನಲ್ಲಿನ ಹೆಸರನ್ನೇ ಹೇಳಿ ನಗೆಪಾಟಲಿಗೀಡಾಗುತ್ತಾರೆ.
ಪ್ರಿಯ ಓದುಗರೇ, ಈ ನ್ಯೂಸ್ ಚಾನಲ್ಲುಗಳಲ್ಲಿ ಸಿಗುವ ಮನರಂಜನೆ ಇತರ ಮನರಂಜನೆಯ ಚಾನಲ್ಲುಗಳಿಗಿಂತೇನೂ ಕಡಿಮೆಯಿಲ್ಲವೆಂಬುದನ್ನು ನಾವು ಪದೇ ಪದೇ ಹೇಳುತ್ತಿದ್ದೇವೆ. ಈ ಮನರಂಜನೆಯ ಮಜಲುಗಳನ್ನು ಬಿಚ್ಚಿಡುತ್ತಾ ನಿಮ್ಮ ಮನ ಮನರಂಜಿಸುವುದಷ್ಟೇ ನಮ್ಮ ಉದ್ದೇಶ.
ಕನ್ನಡದಲ್ಲೊಂದು ಹಳೆಯ ಸುದ್ದಿ ಮಾದ್ಯಮವೊಂದಿದೆ. ಊದುವ ಟಿವಿ ಎಂಬುದು ಅದರ ಹೆಸರು. ಬೇರೆ ನೇರೆ ನ್ಯೂಸ್ ಚಾನಲ್ಲುಗಳಲ್ಲಿನ ನಿರೂಪಕರುಗಳ ಫೇಸ್ ಕಟ್ ಗಳು ಬದಲಾಗುತ್ತಿದ್ದರೆ ಈ ಊದುವ ಚಾನಲ್ಲಿನಲ್ಲಿ ದಶಕದಿಂದಲೂ ಅದೇ ಫೇಸ್ ಕಟ್ ಗಳಿರುವುದೇ ಇದರ ವಿಶೇಷ. ಇನ್ನೂ ದಶಕದ ಕಾಲ ಇವುಗಳೇ ಮುಂದುವರೆಯುವುದರಲ್ಲೂ ಯಾವುದೇ ಅನುಮಾನವಿಲ್ಲ. ಏಕೆಂದರೆ ಇಲ್ಲಿ ಕೆಲಸಕ್ಕೆ ಸೇರಿದವರು ಅಷ್ಟು ಸುಲಭವಾಗಿ ಕೆಲಸ ಬಿಡುವುದಿಲ್ಲ. ಇತ್ತೀಚೆಗೆ ಬಂದಿರುವ ಚಾನಲ್ಲುಗಳಿಗಿಂತಾ ಈ ಟಿವಿ ಬಹಳ ಭಿನ್ನವಾಗಿದೆ. ಒಂದೆರಡು ದಿನದ ಸುದ್ದಿಯನ್ನು ನೋಡದವರು ಛೇ, ನಾವು ಮಿಸ್ ಮಾಡಿಕೊಂಡೆವಲ್ಲಾ ಎಂದು ಪರಿತಪಿಸಬೇಕಿಲ್ಲ. ಅವರು ಊದುವ ಟಿವಿ ಹಾಕಿದರೆ ಸಾಕು ಎರಡು ಮೂರು ದಿನಗಳ ಹಿಂದಿನ ಸುದ್ದಿಯೂ ಲೈವ್ ಎಂದೇ ಬಿತ್ತರವಾಗುತ್ತಿರುತ್ತೆ! ಅಷ್ಟು ಭಿನ್ನ ಈ ಟಿವಿ.
ಈ ಊದುವ ಟೀವಿಯಲ್ಲಿ ವಾಚಾಳ ತಿಮ್ಮರಸ ಅಲಿಯಾಸ್ ’ಉತ್ತರ’ ಕುಮಾರನೆಂಬ ನಿರೂಪಕನೊಬ್ಬನಿದ್ದಾನೆ. ಲಾಸ್ಯ, ನಾಟ್ಯ ಎಲ್ಲವೂ ಕೂಡಿದ ಮಾತಿನ ಕಾರ್ಯಕ್ರಮ ಈತನದ್ದು! ಈತನ ವಿಶೇಷವೆಂದರೆ ತನ್ನ ಮುಂದೆ ಕೂರಿಸಿಕೊಳ್ಳುವ ಅತಿಥಿಗಳಿಗೆ ತಾನು ಕೇಳುವ ಜಹಾಂಗೀರ್ ಜಂಕ್ಷನ್ ನಂತಹ ಕೊನೆ ಮೊದಲಿಲ್ಲದ ಪ್ರಶ್ನೆಗಳಿಗೆ ತಾನೇ ಉತ್ತರವನ್ನು ಕೊಟ್ಟು ಅತಿಥಿಯ ದಿಲ್ ಖುಶ್ ಮಾಡುವುದು! ಈತನ ಪ್ರಶ್ನೆ ಏನೆಂಬುದೇ ಅರ್ಥವಾಗದೇ ಮುಂದೆ ಕೂತವರು ತಡಬಡಿಸುವುದರಿಂದ ಅದಕ್ಕೆ ಉತ್ತರವನ್ನೂ ತಾನೇ ನೀಡಿ ಅವರು ತಡಬಡಾಯಿಸುವುದನ್ನು ತಪ್ಪಿಸುತ್ತಾನೆ ಈ ’ಉತ್ತರ’ ಕುಮಾರ! ಈತ ನಡೆಸಿಕೊಡುವ ಕಾರ್ಯಕ್ರಮದ ಒಂದು ಸ್ಯಾಂಪಲ್ ನಿಮಗಾಗಿ, ನಿಮ್ಮ ಮನೋಲ್ಲೋಸಕ್ಕಾಗಿ, ನಿಮ್ಮ ಮುಂದಿಡುತ್ತಿದ್ದೇವೆ ಓದಿ ಸುಮ್ಮನೇ ನಕ್ಕುಬಿಡಿ.
ಆತನೊಬ್ಬ ಹಳೆಯ ರಾಜಕಾರಣಿ. ರಾಜಕೀಯದಲ್ಲಿ ನುರಿತವನು. ರಾಜ್ಯ ರಾಜಕಾರಣದಲ್ಲಿ ಪ್ರಮುಖ ನಾಯಕರಲ್ಲೊಬ್ಬ. ಆತನನ್ನು ಹಿಡಿದು ತಂದು ತನ್ನ ಮುಂದೆ ಕೂರಿಸಿಕೊಳ್ಳುವ ವಾಚಾಳ ತಿಮ್ಮರಸನೆಂಬ ’ಉತ್ತರ’ ಕುಮಾರ ತನ್ನ ಕಾರ್ಯಕ್ರಮವನ್ನು ಆರಂಭಿಸುತ್ತಾನೆ.
ತಿಮ್ಮರಸ: ನೋಡೀ ಇವ್ರೇ, ನೀವು ರಾಜ್ಯದಲ್ಲಿ ಅನೇಕ ವರ್ಷದಿಂದಲೂ ರಾಜಕೀಯ ಮಾಡುತ್ತಲೇ ಬಂದಿದ್ದೀರಿ, ಈಗ ನಿಮ್ಮ ಪಕ್ಷದ್ದೇ ಸರ್ಕಾರವಿದೆ. ನೀವು ನಿಮ್ಮ ಪಕ್ಷವನ್ನು ಆಡಳಿತಕ್ಕೆ ತರುವಲ್ಲಿ ಬಹಳ ಒದ್ದಾಡಿದ್ದೀರಿ, ಈಗ ನಿಮ್ಮ ಪಕ್ಷದಲ್ಲಿ ಭಿನ್ನ ಮತ ಶುರುವಾಗಿದೆ, ಇದಕ್ಕೆ ನೀವೇ ಕಾರಣವೆಂಬುದು ನನ್ನ ಅಭಿಪ್ರಾಯವಲ್ಲ, ಅದು ಜನರ ಅಭಿಪ್ರಾಯವಾಗಿದೆ. ಜನರು ಆ ಬಗ್ಗೆ ಮಾತಾಡಿಕೊಳ್ಳುತ್ತಿದ್ದಾರೆ. ನೀವು ಇದರ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡಬಯಸುತ್ತೀರಿ, ನೀವು ಬಹಳ ವರ್ಷ ರಾಜಕಾರಣದಲ್ಲೀದ್ದೀರಿ ರಾಜ್ಯ ರಾಜಕಾರಣದಲ್ಲಿ ನಿಮ್ಮದು ಬಹಳ ನಡೆಯುತ್ತೆ! ಬಹಳ ಕಠಿಣ ಶ್ರಮ ಪಟ್ಟು ನೀವು ಆಡಳಿತವನ್ನು ಹಿಡಿದಿದ್ದೀರಿ, ನೀವು ಇಂಥಾ ಸಂದರ್ಭದಲ್ಲಿ ಮುನಿಸಿಕೊಂಡಿರುವುದು ಸರಿಯಾ?
ರಾಜಕಾರಣಿ: ’ನೋಡಿ ಸಾರ್, ನಾನೇನು ಹೇಳ್ತೀನಿ ಅಂದ್ರೆ’ ಅಂದು ಮಾತು ಮುಂದುವರೆಸುವಷ್ಟರಲ್ಲೇ
ತಿಮ್ಮರಸ: ’ಹಾ ನಂಗೊತ್ತು, ನಂಗೊತ್ತು, ಒಂದೇನಪ್ಪಾಂತಂದ್ರೆ, ನೀವು ಏನ್ ಹೇಳ್ತೀರಂತ ನಂಗೊತ್ತು. ನನಗೂ ಅದಕ್ಕೂ ಸಂಬಂಧವಿಲ್ಲಾ, ನಾನು ಭಿನ್ನಮತ ಮಾಡುತ್ತಿಲ್ಲಾ, ನಾನು ಪಕ್ಷದ ನಿಷ್ಟಾವಂತ ರಾಜಕಾರಣಿ, ನನಗೆ ಪಕ್ಷ ಮುಖ್ಯ ಅಂತಾ ನೀವಂತೀರಂತಾ ನಂಗೊತ್ತು. ನೋಡಿ ಇವ್ರೇ, ಇಂದು ನಿಮ್ಮ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಇದು ನನ್ನ ಅಭಿಪ್ರಾಯವಲ್ಲ, ಹಾಗಂತಾ ಜನ ಮಾತಾಡಿಕೊಳ್ಳುತ್ತಿದ್ದಾರೆ, ಯಾಕೆ ಎಲ್ಲವೂ ಸರಿಯಿಲ್ಲ, ಆರಂಭದಲ್ಲಿ ಚೆನ್ನಾಗಿತ್ತಲ್ಲಾ, ಯಾಕೆ ಈಗ ಸರಿಯಿಲ್ಲಾ, ಅದಕ್ಕೆ ನೀವೇನಂತೀರಿ?. ಹಾ ಹಾಗೆ ನಿಮ್ಮ ಪಕ್ಷದಲ್ಲಿ ಎದ್ದಿರುವ ಗೊಂದಲಕ್ಕೆ ನಿಮ್ಮ ಮುಖ್ಯಮಂತ್ರಿಗಳೇ ಕಾರಣ ಅಂಥಾ ಅಭಿಪ್ರಾಯವಿದೆ ಇದು ನನ್ನ ಅಭಿಪ್ರಾಯವಲ್ಲ ಜನರದ್ದು, ಜನ ಹಾಗಂತಾ ಮಾತಾಡುತ್ತಿದ್ದಾರೆ, ಯಾಕೆ ಮುಖ್ಯ ಮಂತ್ರಿಗಳು ಅಧಿಕಾರವನ್ನು ಸರಿಯಾಗಿ ನಡೆಸುತ್ತಿಲ್ಲ?, ಹಾಗೊಂದು ವೇಳೆ ಅವರು ಸರಿಯಾಗಿ ಆಡಳಿತ ನಡೆಸುವುದಿಲ್ಲ ಅಂತಾದರೆ ನಿಮಗಾದರೂ ಆ ಖುರ್ಚಿಯನ್ನು ಬಿಟ್ಟುಕೊಡಬಹುದಲ್ಲಾ, ಅದನ್ನು ಯಾಕೆ ಅವರು ಮಾಡುತ್ತಿಲ್ಲ, ಈ ಬಗ್ಗೆ ನಾಡಿನ ಜನತೆಗೆ ನೀವು ದೀರ್ಘವಾದ ಉತ್ತರವನ್ನು ಕೊಡಬೇಕಾಗಿದೆಯಲ್ಲವೇ?.’
ಈತ ಕೇಳಿದ ಪ್ರಶ್ನೆಯ ತಲೆ ಬುಡ ಅರ್ಥವಾಗದ ರಾಜಕಾರಣಿ: ’ನೋಡೀ ಸಾರ್, ನೀವು ಯಾರ ಕುರಿತು ಪ್ರಶ್ನೆ ಕೇಳಿದ್ದೀರಿ ಅನ್ನೋದು ಗೊತ್ತಾಗ್ಲಿಲ್ಲ, ನಾನು ಏನು ಹೇಳೋದು ಅಂದ್ರೆ...." ಅನ್ನುವಷ್ಟರಲ್ಲಿ

ತಿಮ್ಮರಸ: ’ಹಾ ನಂಗೊತ್ತು, ನಂಗೊತ್ತು ನೀವೇನ್ ಹೇಳ್ತೀರಂತಾ ನಂಗೊತ್ತು. ಒಂದೇನಪ್ಪಂತಂದ್ರೆ, ನನಗೂ ಇದಕ್ಕೂ ಸಂಬಂಧವಿಲ್ಲಾ ಅಂತಾ ತಾನೇ ನೀವು ಹೇಳೋದು, ನಾನು ಪಕ್ಷದ ನಿಷ್ಟಾವಂತ ಅಂಥಾ ತಾನೇ ನೀವು ಹೇಳ್ತಿರೋದು!’ ಎಂದು ನಕ್ಕಾಗ ರಾಜಕಾರಣಿ ಹೌದೆಂದು ತಲೆ ಅಲ್ಲಾಡಿಸುತ್ತಾರೆ.
ಆಗ ಮುಂದುವರೆವ ತಿಮ್ಮರಸ: "ನೋಡೀ ಇವ್ರೇ...ನಾನು ಏನ್ ಹೇಳದೂಂದ್ರೆ ನೀವು ಇಷ್ಟೆಲ್ಲಾ ವರ್ಷ ರಾಜಕಾರಣಿಯಾಗಿ ಪಕ್ಷವನ್ನು ಕಟ್ಟಿದ್ದೀರಿ, ಈಗ ಅಧಿಕಾರದಲ್ಲಿದ್ದೀರಿ, ನಿಮ್ಮ ಬಹುತೇಕ ಮಂತ್ರಿಗಳು ರಾಜೀನಾಮೆ ನೀಡಿದ್ದಾರೆ, ಯಾಕೆ ಅವರಿಂದ ರಾಜೀನಾಮೆ ಪಡೆದಿರಿ? ಅವರಿಗೆ ಅದರ ಬಗ್ಗೆ ಬೇಸರವಾಗಿರಬಹುದಲ್ಲವೇ, ಇದು ನಿಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲವೆಂಬುದನ್ನು ತೋರಿಸುತ್ತದಲ್ಲವೇ?, ಇದು ನನ್ನ ಅಭಿಪ್ರಾಯವಲ್ಲಾ ಜನ ಹಾಗಂತಾ ಬೀದಿಯಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ, ಭ್ರಷ್ಟಾಚಾರವೆಂದರೆ ಏನು?, ಯಾತಕ್ಕಾಗಿ ಅದನ್ನು ಮಾಡಬೇಕು ಅಂತೆಲ್ಲಾ ನಾನಲ್ಲ, ಜನ ಕೇಳುತ್ತಿದ್ದಾರೆ. ನಿಮ್ಮಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು? ನೀವೇ ಅದಕ್ಕೆ ಅರ್ಹರು ಎಂಬುದು ನನ್ನ ಅಭಿಪ್ರಾಯವಲ್ಲ, ಜನ ಹಾಗಂತಾ ಮಾತಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೀವೆಂದರೆ ನೀವು ಒಪ್ಪಿಕೊಳ್ಳುತ್ತೀರಾ?

ರಾಜಕಾರಣಿ ಸಖತ್ ಖುಶಿಯಾಗಿ: ’ನೋಡೀ ಸಾರ್, ನೀವು...’ ಅನ್ನುವಷ್ಟರಲ್ಲಿ ಮಧ್ಯ ಪ್ರವೇಶಿಸುವ ತಿಮ್ಮರಸ...
’ಹಾ ನನಗ್ಗೊತ್ತು, ನನಗ್ಗೊತ್ತು, ನೀವೇನ್ ಹೇಳ್ತೀರಂತಾ, ಒಂದೇನಪ್ಪಾಂತಂದ್ರೆ ನೀವು ಜನ ಇಷ್ಟ ಪಟ್ಟರೆ ಮುಖ್ಯಮಂತ್ರಿಯಾಗಕ್ಕೆ ರೆಡೀ ಅಂತಾ ನಂಗೊತ್ತು, ಆದ್ರೆ ಏನಪ್ಪಾಂದ್ರೆ ನೀವು ಮುಂದಿನ ಮುಖ್ಯಮಂತ್ರಿಯಾದ್ರೆ ಯಾವ ರೀತಿ ಈಗ ಎದ್ದಿರುವ ಭಿನ್ನಮತವನ್ನು ಬಗೆಹರಿಸುತ್ತೀರಿ ಎಂಬುದು ನನ್ನ ಪ್ರಶ್ನೆಯಲ್ಲಾ ಜನ ಹಾಗಂತಾ ಬೀದಿಯಲ್ಲಿ ಮಾತಾಡುತ್ತಿದ್ದಾರೆ, ನೀವು ಭ್ರಷ್ಟಾಚಾರವನ್ನು ಹೇಗೆ ತಡೆಯುತ್ತೀರಿ, ನಿಮ್ಮ ಮೇಲೂ ಭ್ರಷ್ಟಾಚಾರದ ಆಪಾದನೆಗಳಿವೆಯಲ್ಲಾ, ಇದು ನನ್ನ ಅಭಿಪ್ರಾಯವಲ್ಲ, ಜನ ಹಾಗಂತಾ ಮಾತಾಡುತ್ತಿದ್ದಾರೆ, ನಿಮ್ಮನ್ನು ಯಾಕೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕು?, ನೀವೇ ಈ ಮುಖ್ಯಮಂತ್ರಿಯನ್ನು ಕೆಳಗಿಳಿಸಲು ಹುನ್ನಾರ ನಡೆಸುತ್ತಿದ್ದೀರಾ?, ಇದು ನನ್ನ ಅಭಿಪ್ರಾಯವಲ್ಲ, ಜನ ಹಾಗಂತಾ ಬೀದಿಯಲ್ಲಿ ನಿಂತು ಮಾತಾಡುತ್ತಿದ್ದಾರೆ. ನೀವು ನಿಮ್ಮ ಮುಖ್ಯಮಂತ್ರಿ ರಾಜಿಗೆ ಕರೆದರೆ ಒಪ್ಪಿಕೊಳ್ಳುತ್ತೀರಾ? ನೀವು ನಿಮ್ಮ ಸ್ವಾರ್ಥಕ್ಕಾಗಿ ಭಿನ್ನಮತವನ್ನು ಆರಂಭಿಸಿದ್ದೀರಿ ಎಂಬುದು ನನ್ನ ಅಭಿಪ್ರಾಯವಲ್ಲಾ ಜನ ಹಾಗಂತಾ... ಇದರ ಬಗ್ಗೆ ನೀವೇನಂತೀರಿ?.

ರಾಜಕಾರಣಿ: ’ನೋಡೀ, ತಿಮ್ಮರಸರೇ, ನಾನು...’
ತಿಮ್ಮರಸ: ’ಹಾ ನಂಗೊತ್ತು, ನಂಗೊತ್ತು, ಜನ ಇಷ್ಟ ಪಟ್ಟರೆ ನಾನು ಮುಖ್ಯಮಂತ್ರಿಯಾಗೋಕೆ ರೆಡಿ ಅಂತಾ ನೀವೇಳ್ತೀರಿ ಅಂತ ನಂಗೊತ್ತು. ಒಂದೇನಪ್ಪಾಂತಂದ್ರೆ ನೀವು ಹಿಂದೆಲ್ಲಾ ನಾನು ಮುಖ್ಯಮಂತ್ರಿಯಾಗಕ್ಕೆ ಸಿದ್ದ ಎಂದೇ ಹೇಳ್ತಿದ್ರಿ, ಈಗ ಬಿನ್ನಮತದ ಮೂಲಕ ನೀವು ಈ ಮುಖ್ಯಮಂತ್ರಿಯನ್ನು ಕೆಳಗಿಳಿಸಿ ನಿಮ್ಮ ಆಸೆ ನೆರವೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದೀರಿ, ನೀವು ಮುಖ್ಯಮಂತ್ರಿಯಾದರೆ ಜನರಿಗೆ ಯಾವ ಹೊಸ ಕಾರ್ಯಕ್ರಮವನ್ನು ಕೊಡುತ್ತೀರಿ?. ನನಗೇನೋ ನೀವು ಆ ಖುರ್ಚಿಯಲ್ಲಿ ಕೂರುವುದನ್ನು ನೋಡಬೇಕೆಂಬ ಆಸೆಯಿದೆ!, ನೀವು ನಿಮ್ಮ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಾ ಯಾವುದೇ ಕಾರ್ಯವನ್ನು ಮಾಡಿಲ್ಲಾ ಎಂಬ ದೂರಿದೆ, ಇದು ನನ್ನ ಅಭಿಪ್ರಾಯವಲ್ಲಾ, ಹಾದೀಲಿ, ಬೀದೀಲಿ ಓಡಾಡುವ ಜನ ಹಾಗಂತಾ ಮಾತಾಡ್ತಾರೆ. ನೀವು ಯಾಕೆ ಜನರ ಮಾತನ್ನು ಕೇಳುವುದಿಲ್ಲಾ, ನಿಮ್ಮನ್ನು ಯಾಕೆ ಜನ ಆರಿಸಿ ಕಳಿಸಿದ್ದು, ಇವೆಲ್ಲಾ ಪ್ರಶ್ನೆಗಳಿಗೂ ನೀವು ಜನರಿಗೆ ಉತ್ತರ ಕೊಡಬೇಕಿದೆ’

ಈತ ಯಾವ ಪ್ರಶ್ನೆ ಕೇಳಿದ? ತಾನು ಯಾವುದಕ್ಕೆ ಉತ್ತರ ಕೊಡಬೇಕೆಂದು ಗಲಿಬಿಲಿಗೊಳಗಾದ ರಾಜಕಾರಣಿ: ನೊಡೀ ತಿಮ್ಮರಸರೇ, ನೀವು ಕೇಳಿದ ಪ್ರಶ್ನೆ ನನಗರ್ಥವಾಗಲಿಲ್ಲ, ನಾನೇನೇಳದು ಅಂದ್ರೆ’ ಎನ್ನುವಷ್ಟರಲ್ಲಿ

ತಿಮ್ಮರಸ: ಹಾ ನಂಗೊತ್ತು ನಂಗೊತ್ತು, ನೀವೇನ್ ಹೇಳ್ತೀರಂತಾ, ನಾನು ಸಾಕಷ್ಟು ಅಭಿವ್ರದ್ದಿ ಕಾರ್ಯಗಳನ್ನು ಮಾಡಿದ್ದೀನಿ ಅಂಥಾ ತಾನೇ ನೀವು ಹೇಳುವುದು, ಒಂದೇನಪ್ಪಾಂದ್ರೆ, ನಿಮ್ಮ ಜನಪ್ರಿಯತೆಯನ್ನು ಸಹಿಸದೇ ನಿಮ್ಮ ವಿರೋಧಿಗಳು ನಿಮ್ಮ ಬಗ್ಗೆ ಮಾಡುತ್ತಿರುವ ಅಪಪ್ರಚಾರವಿದು ಅಂತಾ ನೀವೇಳ್ತೀರಿ ಅಲ್ವಾ...’
ರಾಜಕಾರಣಿ ಖುಶಿಯಾಗಿ ತಲೆಯನ್ನು ಮೇಲಕ್ಕೂ ಕೆಳಕ್ಕೂ ಆಡಿಸಿ ಮುಂದೆ ಮಾತನಾಡಲು ಬಾಯಿ ತೆರೆಯುವಷ್ಟರಲ್ಲಿ
ಮುಂದುವರೆಸಿದ ತಿಮ್ಮರಸ ’ನೋಡೀ ಇವ್ರೇ, ನೀವು ಬಹಳ ರಸಿಕರಂತೇ ಹೌದಾ?, ಇದು ನನ್ನ ಅಭಿಪ್ರಾಯವಲ್ಲಾ ಜನ ಬೀದಿಬದಿಯಲ್ಲಿ ನಿಂತು ಬೀಡಿ ಸೇದುತ್ತಾ ಆ ಬಗ್ಗೆ ಮಾತಾಡುವುದನ್ನು ನಾನೇ ಎಷ್ಟೋ ಬಾರಿ ಕಾರಿನಲ್ಲಿ ಬರುವಾಗ ಕೇಳಿಸಿಕೊಂಡಿದ್ದೇನೆ!, ನೀವು ಇದರ ಬಗ್ಗೆ ರಾಜ್ಯದ ಜನತೆಗೆ ಉತ್ತರ ಕೊಡಲೇ ಬೇಕಿದೆ. ನೀವು ಯಾಕಾಗಿ ರಸಿಕರಾದಿರಿ? ಇದು ನಿಮಗೆ ವಂಶಪಾರಂಪರ್ಯವಾಗಿ ಬಂದ ಬಳುವಳಿಯೇ? ನೀವು ರಾಜಕೀಯ ರಂಗಕ್ಕಿಳಿದ ನಂತರವಾದರೂ ನಿಮ್ಮ ರಸಿಕತೆಯನ್ನು ಕಡಿಮೆ ಮಾಡಿಕೊಳ್ಳಬಹುದಿತ್ತಲ್ಲವೇ?, ಇದು ನನ್ನ ಅಭಿಪ್ರಾಯವಲ್ಲಾ, ಜನ ಹಾಗಂತಾ ಬೀದಿಬದಿಯಲ್ಲಿ ಬೀಡಿ ಸೇದುತ್ತಾ’...

ತಿಮ್ಮರಸನ ಮಾತು ಕೇಳಿ ಅಕ್ಷರಶಃ ಗಾಬರಿಯಾದ ಏಕಪತ್ನೀ ವ್ರತಸ್ಥ ರಾಜಕಾರಣಿ: ಹೇ, ಹೇ, ಯಾರು ಹೇಳಿದ್ದು ಹಂಗಂತಾ, ನೋಡೀ ತಿಮ್ಮರಸರೇ’ ಎನ್ನುವಷ್ಟರಲ್ಲಿ

ತಿಮ್ಮರಸ: ಹಾ ನಂಗೊತ್ತು, ನಂಗೊತ್ತು, ನೀವು ಏನ್ ಹೇಳ್ತೀರಂತಾ, ನೊಡೀ ಇವ್ರೇ ನಾನು ರಸಿಕನಲ್ಲಾ ನನ್ನ ಬಗ್ಗೆ ನನ್ನ ವಿರೋಧಿಗಳು ನಡೆಸುತ್ತಿರುವ ಪಿತೂರಿ ಇದು ಅಂತಾ ನೀವು ಹೇಳ್ತೀರಂತಾ ನಂಗೊತ್ತು. ನೀವು ಬರೀ ಪಂಚೆಯಲ್ಲೇ ಇರುತ್ತೀರಲ್ಲಾ ಅದಕ್ಕೆ ಏನು ಕಾರಣ? ಹಿಂದೆಲ್ಲಾ ನೀವು ಸಫ಼ಾರೀ ಸೂಟಿನಲ್ಲೇ ಇರ್ತ್ತಿದ್ರಿ, ಇತ್ತೀಚೆಗೆ ಬರೀ ಪಂಚೆಯಲ್ಲೇ ಇರ್ತ್ತೀರ... ಹಾಗೇ ಇನ್ನೊಂದೇನಪ್ಪಾಂದ್ರೆ ನೀವು ಬರೀ ಬಿಳೀ ಬಟ್ಟೆಯನ್ನೇ ತೊಡುವುದನ್ನು ಇತ್ತೀಚೆಗೆ ಮಾಡುತ್ತಿದ್ದೀರಿ, ಯಾಕೆ ಹಾಗೆ? ಹಿಂದೆಲ್ಲಾ ನೀವು ಬಣ್ಣದ ಬಟ್ಟೇ ತೊಟ್ಟು ರಂಗು ರಂಗಾಗಿ ಕಾಣಿಸುತಿದ್ರಿ, ನೀವು ಬಿಳೀ ಬಟ್ಟೆ ತೊಡುತ್ತಿರುವುದು ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿಂದಾ ಅಲ್ವಾ? ಇದು ನನ್ನ ಅಭಿಪ್ರಾಯವಲ್ಲಾ ಜನ ಹಾಗಂತಾ ಹಾದಿ ಬೀದಿಯಲ್ಲಿ..
ಈಗಲಾದರೂ ಒಂದೆರಡು ಮಾತಾಡಬಹುದೆಂಬ ಆಸೆಯಿಂದ ರಾಜಕಾರಣಿ: ’ನೋಡೀ ತಿಮ್ಮರಸರೇ, ನಾನು ಯಾಕೆ ಬರೀ ಬಿಳೀ ಬಟ್ಟೆಯನ್ನೇ ಹಾಕ್ತೀನಂದ್ರೇ’ ಎನ್ನುವಷ್ಟರಲ್ಲಿ,

ತಿಮ್ಮರಸ: ಹಾ ನಂಗೊತ್ತು, ನಂಗೊತ್ತು, ನೀವೇನ್ ಹೇಳ್ತೀರಂತಾ, ಇದು ನಿಮ್ಮ ವಿರೋಧಿಗಳು ಮಾಡುತ್ತಿರುವ ಅಪಪ್ರಚಾರ ಅಂತೀರಾ ಅಲ್ವಾ, ನೋಡೀ ಇವ್ರೇ ಒಂದೇನಪ್ಪಾಂದ್ರೆ, ನೀವು ರಾಜಕಾರಣಕ್ಕೆ ಯಾಕೆ ಬಂದಿರಿ ಎಂಬುದು ಇಲ್ಲಿ ಬಹು ಮುಖ್ಯ ಪ್ರಶ್ನೆಯಾಗಿದೆ. ನೀವು ಹಿಂದೆ ವ್ಯಾಪಾರ ಅದೂ ಇದೂ ಅಂತಾ ಮಾಡಿಕೊಂಡಿದ್ದವರು, ಈಗ ರಾಜಕೀಯದಲ್ಲೂ ಶಾಸಕರ ವ್ಯಾಪಾರ ಮಾಡುತ್ತಿದ್ದೀರಾ ಎಂಬ ಗಂಭೀರ ಆಪಾದನೆ ನಿಮ್ಮ ಮೇಲಿದೆ, ಇದು ನನ್ನ ಅಭಿಪ್ರಾಯವಲ್ಲಾ ಜನ ಹಾಗಂತಾ ಹಾದಿಬೀದಿಯಲ್ಲಿ ನಿಂತು...ಇರಲಿ ಬಿಡಿ...ನೀವು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲಾ ಎಂದು ನನಗ್ಗೊತ್ತು, ನೀವು ಶಾಸಕರನ್ನು ಯಾಕಾಗಿ ವ್ಯಾಪಾರ ಮಾಡುತ್ತೀರಾ ಎಂಬುದನ್ನಂತೂ ವಿವರವಾಗಿ ರಾಜ್ಯದ ಜನತೆಯ ಮುಂದೆ ನಮ್ಮ ಊದುವ ಟಿವಿಯ ಮುಖಾಂತರ ಈಗ ಹೇಳಲೇಬೇಕಿದೆ, ನೀವು ವ್ಯಾಪಾರ ಮಾಡಿದಂತಾ ಶಾಸಕರನ್ನು ಎಲ್ಲಿಡುತ್ತೀರಿ?, ನಿಮ್ಮ ವ್ಯಾಪಾರ ಮಳಿಗೆಯ ಹಿಂದಿನ ಗೋದಾಮಿನಲ್ಲಿ ಗುಡ್ಡೆ ಹಾಕ್ತೀರಂತೇ ಹೌದಾ, ಇದು ನನ್ನ ಅಭಿಪ್ರಾಯವಲ್ಲಾ ಜನ ಹಾಗಂತಾ ರಸ್ತೆಬದಿಯಲ್ಲಿ ನಿಂತು ಮಾತಾಡುವುದನ್ನು ಕಾರಲ್ಲಿ ಬರುವಾಗ ನಾನೇ ಕೇಳಿಸಿಕೊಂಡಿದ್ದೇನೆ!. ನೀವು ಇದರ ಬಗ್ಗೆ ರಾಜ್ಯದ ಜನತೆಗೆ ಏನ್ ಹೇಳ್ತೀರಿ?.

ಸ್ವಲ್ಪ ರಾಂಗಾದ ರಾಜಕಾರಣಿ: ’ಅಲ್ರೀ ಶಾಸಕರನ್ನು ವ್ಯಾಪಾರ ಮಾಡೊದಿಕ್ಕೇನು ಅವರು ಹಾಸನದ ಆಲೂಗಡ್ಡೆಯಾ?. ನಾನೇಳದು ಏನಂದ್ರೇ’ ಎನ್ನುವಷ್ಟರಲ್ಲಿ
ತಿಮ್ಮರಸ: ’ಹಾ ನಂಗೊತ್ತೂ, ನಂಗೊತ್ತೂ ನೀವೇನ್ ಹೇಳ್ತೀರಂತಾ, ಇದು ನನ್ನ ವಿರೋಧಿಗಳು ಮಾಡುತ್ತಿರುವ ಅಪಪ್ರಚಾರ ಅಂತಾ ತಾನೇ ನೀವು ಹೇಳೋದು?, ನೋಡೀ ಇವ್ರೇ ಒಂದೇನಪ್ಪಾಂದ್ರೆ, ನೀವು ಕಾರಲ್ಲಿ ಹೋಗುವಾಗ ಯಾವಾಗಲೂ ಕಾರಿನ ಗ್ಲಾಸನ್ನು ಏರಿಸಿಕೊಂಡಿರುತ್ತೀರಾ ಎಂಬ ಗಂಭೀರವಾದ ಆಪಾದನೆ ನಿಮ್ಮ ಮೇಲಿದೆ! ನೀವು ಯಾಕೆ ಗ್ಲಾಸನ್ನು ಏರಿಸಿಕೊಳ್ಳುತ್ತೀರಿ ಎಂಬುದರ ಬಗ್ಗೆ ನೀವು ನಮ್ಮ ಊದುವ ಟೀವಿಯ ಮೂಲಕ ರಾಜ್ಯದ ಜನತೆಗೆ ವಿವರಣೆಯನ್ನು ಕೊಡಲೇ ಬೇಕಿದೆ!, ಅಲ್ಲದೇ ಸದಾ ನೀವು ಕಣ್ಣಿಗೂ ಕಪ್ಪು ಕನ್ನಡಕವನ್ನು ಹಾಕ್ಕಳ್ಳದ್ ಯಾಕೆ ಎಂದು ನಾನಲ್ಲಾ ಜನ ಹಾದಿಬೀದಿಯಲ್ಲಿ ನಿಂತು ಏನೇನೋ ಮಾತಾಡುವುದನ್ನು ನಾನೇ ನನ್ನ ಕಿವಿಯಾರೆ ಕಾರಲ್ಲಿ ಬರುವಾಗ ಕೇಳಿಸಿಕೊಂಡಿದ್ದೀನಿ!, ಇದರ ಬಗ್ಗೆಯಂತೂ ನೀವು ಸುದೀರ್ಘ ವಿವರಣೆಯನ್ನು ರಾಜ್ಯದ ಜನತೆಗೆ ನೀಡಲೇಬೇಕಿದೆ?.’
ಈತ ಯಾವುದಾವುದೋ ಸಂಬಂಧವಿಲ್ಲದ ಪ್ರಶ್ನೆಗಳನ್ನು ಕೇಳಿ ತನಗೂ ಮಾತನಾಡಲು ಬಿಡದೇ ತಾನೆ ಎಲ್ಲವನ್ನೂ ಹೇಳುತ್ತಿದ್ದರಿಂದ ಗೊಂದಲಕ್ಕೀಡಾದ ರಾಜಕಾರಣಿ: ’ನಾನು ಕಾರಿನಲ್ಲಿ ಹೋಗುವಾಗ ಗ್ಲಾಸನ್ನು ಏರಿಸಿಕೊಳ್ಳುವುದೂ ಅಪರಾಧವೇ ತಿಮ್ಮರಸರೇ, ನೋಡಿ, ನಾನೇಳದ್ ಏನಂದ್ರೇ’ ಎನ್ನುವಷ್ಟರಲ್ಲಿ
ತಿಮ್ಮರಸ: ಹಾ ನಂಗೊತ್ತು, ನಂಗೊತ್ತು, ನೀವೇನ್ ಹೇಳ್ತೀರಂತಾ’, ಅಂದವನೇ ವೀಕ್ಷಕರತ್ತ ತಿರುಗಿ ’ ಪ್ರಿಯ ವೀಕ್ಷಕರೇ ಇಲ್ಲಿಗೆ ನಮ್ಮ ಬಲೆಗೆ ಸಿಗಿಸುವ ಕಾರ್ಯಕ್ರಮವನ್ನು ಮುಕ್ತಾಯ ಮಾಡುವ ಸಮಯ ಬಂದಿದೆ. ಇಷ್ಟು ಹೊತ್ತು ನಮ್ಮ ಅತಿಥಿಗಳಾದ ಶ್ರೀಯುತ----ಅವರು ಒಂದು ಘಂಟೆಯ ಕಾಲ ರಾಜ್ಯದ ಜನತೆಯ ಮುಂದೆ ತಮ್ಮ ಮನದಾಳದ ಮಾತುಗಳನ್ನು ಸುದೀರ್ಘವಾಗಿ ಬಿಚ್ಚಿಟ್ಟಿದ್ದಾರೆ. ಈ ಬಲೆಯಲ್ಲಿ ಸಿಗಿಸುವ ಜನಪ್ರಿಯ ಕಾರ್ಯಕ್ರಮವನ್ನು ನೋಡಿದ್ದಕ್ಕೆ ನನ್ನ ನಮಸ್ಕಾರಗಳು. ಮುಂದಿನವಾರ ಮತ್ತೊಬ್ಬ ಅತಿಥಿಯೊಂದಿಗೆ ಸುದೀರ್ಘವಾದ ಚರ್ಚೆಯನ್ನು ಮಾಡೋಣ’ ಎಂದು ನಾಟ್ಯದಂತೆ ಕೈ ಮುಗಿದು ಹೊರಡುತ್ತಾನೆ. ಅವನ ಪ್ರಶ್ನೆಗಳು, ಅವನದೇ ಉತ್ತರಗಳು, ಅವನ ಲಾಸ್ಯದಿಂದ ಭಯಂಕರ ಇರಿಟೇಟ್ ಆಗಿ ಫ್ಯೂಸ್ ಕೆಡಿಸಿಕೊಳ್ಳುವ ರಾಜಕಾರಣಿ ಅದನ್ನು ತೋರಿಸಿಕೊಳ್ಳದೆ ಸ್ಟೂಡಿಯೋದಿಂದ ನೇರ ಒಂದೆರಡು ಪೆಗ್ ಸುರಿದುಕೊಳ್ಳಲು ಪಾನೀಯದಂಗಡಿಗೆ ಹೊರಡುತ್ತಾರೆ. ಊದುವ ಟೀವಿಯಲ್ಲಿನ ಉತ್ತರಕುಮಾರನ ಈ ಕಾರ್ಯಕ್ರಮವನ್ನು ಕಣ್ಣು ಕಿವಿ ಬಿಟ್ಟುಕೊಂಡು ತುಂಬಿಕೊಳ್ಳುವ ಜನತೆಯ ಮೆದುಳು ಮತ್ತಷ್ಟು ಹಿಗ್ಗುತ್ತದೆ.

ಒಂದು ಘಂಟೆಯ ಕಾರ್ಯಕ್ರಮದಲ್ಲಿ ಐವತ್ತೈದು ನಿಮಿಷ ತಾನೇ ಮಾತಾಡಿ ಅತಿಥಿಗಳಿಂದ ಸುದೀರ್ಘವಾದ ಉತ್ತರವನ್ನು ಪಡೆದುದಾಗಿ ಹೇಳುವ ’ಉತ್ತರ’ಕುಮಾರನ ಬಲೆಗೆ ಸಿಗಿಸುವ ಕಾರ್ಯಕ್ರಮದ ತುಣುಕನ್ನು ಈ ಸಂಚಿಕೆಯಲ್ಲಿ ನಿಮ್ಮ ಮುಂದಿಟ್ಟಿದ್ದೀವಿ. ಓದಿ ತಲೆಕೆಟ್ಟು ತಲೆನೋವಿನ ಮಾತ್ರೆಗಳ ಡಬ್ಬಿಯನ್ನೇ ನುಂಗುವಂತಾದರೆ ಅದಕ್ಕೆ ನಾವು ಕಾರಣರಲ್ಲ ಎಂದು ಹೇಳುತ್ತಾ ಮುಂದಿನ ಸಂಚಿಕೆಯವರೆಗೆ ಆರಾಮಾಗಿರಿ ಎನ್ನುತ್ತಾ...